ಅಶೋಕ್ ಕುಮಾರ್ ಬರುವಾ(೧ ಜುಲೈ, ೧೯೩೬ - ೩೦ ಮೇ, ೨೦೨೧)ರವರು ಒಬ್ಬ ಭಾರತೀಯ ಘನೀಕೃತ ದ್ರವ್ಯ ಭೌತಶಾಸ್ತ್ರಜ್ಞರಾಗಿದ್ದರು ಮತ್ತು ಶಿಬ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಸೈನ್ಸ್ ಅಂಡ್ ಟೆಕ್ನಾಲಜಿಯ ಗೌರವ ನಿವೃತ್ತ ಪ್ರಾಧ್ಯಾಪಕರಾಗಿದ್ದರು. ಅವರು ದೃಗ್ವಿಜ್ಞಾನ ಮತ್ತು ಆಪ್ಟೋಎಲೆಕ್ಟ್ರಾನಿಕ್ಸ್ ಸಂಶೋಧನೆಯ ಮೇಲೆ ಕೇಂದ್ರೀಕರಿಸಿದ್ದರು. ೨೦೦೩ ರಲ್ಲಿ ಭಾರತ ಸರ್ಕಾರವು ಅವರಿಗೆ ನಾಲ್ಕನೇ ಅತ್ಯುನ್ನತ ಭಾರತೀಯ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಯನ್ನು ನೀಡಿ ಗೌರವಿಸಿತು. == ಜೀವನಚರಿತ್ರೆ == ಅಶೋಕ್ ಕುಮಾರ್ ಬರುವಾರವರು ಜುಲೈ ೧, ೧೯೩೬ ರಂದು ಭಾರತದ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಜನಿಸಿದರು. ಅವರು ಹರೇ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು ಮತ್ತು ಕೋಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಿಂದ ಗೌರವಗಳೊಂದಿಗೆ ಭೌತಶಾಸ್ತ್ರದಲ್ಲಿ ಪದವಿ ಪಡೆದರು. ಇವರು ಕೋಲ್ಕತ್ತಾ ವಿಶ್ವವಿದ್ಯಾನಿಲಯದ ರಾಜಬಜಾರ್ ವಿಜ್ಞಾನ ಕಾಲೇಜಿನಲ್ಲಿ (೧೯೫೬) ಸ್ನಾತಕೋತ್ತರ ಅಧ್ಯಯನ ಮಾಡಿದರು. ನಂತರ ಅವರು ೧೯೬೦ ರಲ್ಲಿ ಪ್ರೊಫೆಸರ್ ಬಿ.ಎನ್.ಶ್ರೀವಾಸ್ತವ ಅವರ ಮಾರ್ಗದರ್ಶನದಲ್ಲಿ ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಷನ್ ಆಫ್ ಸೈನ್ಸ್ (ಐಎಸಿಎಸ್) ನಿಂದ ಪಿ.ಹೆಚ್‌ಡಿ ಪಡೆದರು. ಯುಎಸ್ಎ()ಯಲ್ಲಿ ಪೋಸ್ಟ್ ಡಾಕ್ಟರಲ್ ಸಂಶೋಧನೆಯನ್ನು ಪೂರ್ಣಗೊಳಿಸಿದ ನಂತರ ಅವರು ೧೯೬೪ ರಲ್ಲಿ ಐಎಸಿಎಸ್()ಗೆ ರೀಡರ್ ಆಗಿ ಸೇರುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅಲ್ಲಿ ಅವರು ೧೯೭೧ ರಲ್ಲಿ ಪ್ರಾಧ್ಯಾಪಕರಾದರು. ೧೯೮೨ ರಲ್ಲಿ ನಿರ್ದೇಶಕರಾದ ಇವರು ೧೯೮೯ ರವರೆಗೆ ಅಲ್ಲಿ ಕೆಲಸ ಮಾಡಿದರು. ಬರುವಾ ಅವರು ದೃಗ್ವಿಜ್ಞಾನ ಮತ್ತು ಆಪ್ಟೋಎಲೆಕ್ಟ್ರಾನಿಕ್ಸ್ ನಲ್ಲಿ ಸಂಶೋಧನೆ ಮಾಡಿದ್ದರು ಮತ್ತು ಉತ್ಪಾದನಾ ತಂತ್ರಜ್ಞಾನ ಮತ್ತು ಉಪಕರಣಗಳು ಸೇರಿದಂತೆ ಅಮಾರ್ಫಸ್ ಸಿಲಿಕಾನ್ (ಎ-ಸಿ) ಸೌರ ಕೋಶಗಳು ಮತ್ತು ಸೌರ ಮಾಡ್ಯೂಲ್ ಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೀರ್ತಿಗೆ ಪಾತ್ರರಾಗಿದ್ದರು. ವಿಮಾನದ ಮೇಲಾವರಣಗಳು ಮತ್ತು ವಿಂಡ್‌ಶೀಲ್ಡ್‌ಗಳ ರಾಡಾರ್ ಅಪಾರದರ್ಶಕ ಲೇಪನದ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಅವರ ಸಂಶೋಧನೆಗಳನ್ನು ಅಂತರರಾಷ್ಟ್ರೀಯ ಮಟ್ಟದ ಪೀರ್ ರಿವ್ಯೂಡ್ ಜರ್ನಲ್‌ಗಳಲ್ಲಿ ಪ್ರಕಟವಾದ ೩೦೦ ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳ ಮೂಲಕ ದಾಖಲಿಸಲಾಗಿದೆ. ಅವರು ತಮ್ಮ ಡಾಕ್ಟರೇಟ್ ಸಂಶೋಧನೆಯಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ೨೦೧೦ ರಿಂದ ೨೦೧೮ ರವರೆಗೆ ಶಿಬ್‌ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಸೈನ್ಸ್ ಅಂಡ್ ಟೆಕ್ನಾಲಜಿಯ ಗೌರವ ಪ್ರಾಧ್ಯಾಪಕರಾಗಿದ್ದ ಬರುವಾರವರು ಬೆಂಗಳೂರಿನ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಮತ್ತು ಪಶ್ಚಿಮ ಬಂಗಾಳ ಅಕಾಡೆಮಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ ಚುನಾಯಿತ ವ್ಯಕ್ತಿಯಾಗಿದ್ದರು. ಅವರು ಜವಾಹರಲಾಲ್ ನೆಹರು ರಾಷ್ಟ್ರೀಯ ಸೌರ ಮಿಷನ್ ಅಡಿಯಲ್ಲಿ ಸೌರ ದ್ಯುತಿವಿದ್ಯುಜ್ಜನಕಗಳ ಬಗ್ಗೆ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದರು. ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸ್ಥಾಪಿಸಿದ ಸೌರ ಸಂಶೋಧನಾ ಉಪಕ್ರಮಗಳ ಕಾರ್ಯಪಡೆಯ ಸದಸ್ಯರಾಗಿದ್ದರು. ಅವರು ಏಷ್ಯಾ ಪೆಸಿಫಿಕ್ ಅಕಾಡೆಮಿ ಆಫ್ ಮೆಟೀರಿಯಲ್ಸ್ ನ ಸದಸ್ಯರಾಗಿ, ಆರನೇ ಅಂತರರಾಷ್ಟ್ರೀಯ ದ್ಯುತಿವಿದ್ಯುಜ್ಜನಕ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಮ್ಮೇಳನದ ಅಧ್ಯಕ್ಷರಾಗಿ, ಇಂಡಿಯನ್ ಫಿಸಿಕಲ್ ಸೊಸೈಟಿಯ ಅಧ್ಯಕ್ಷರಾಗಿ ಮತ್ತು ಬಿರ್ಲಾ ಇಂಡಸ್ಟ್ರಿಯಲ್ ಅಂಡ್ ಟೆಕ್ನಾಲಜಿಕಲ್ ಮ್ಯೂಸಿಯಂನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರು ಎಚ್ಎಚ್ವಿ ಸೆಂಟರ್ ಫಾರ್ ಅಡ್ವಾನ್ಸ್ಡ್ ಫೋಟೋವೋಲ್ಟಾಯಿಕ್ ಟೆಕ್ನಾಲಜೀಸ್ನೊಂದಿಗೆ ಹೆಚ್ಚುವರಿ ನಿರ್ದೇಶಕರಾಗಿ ಸಂಬಂಧ ಹೊಂದಿದ್ದರು. ಬರುವಾ ಅವರು ೨೦೦೨ ರಲ್ಲಿ ಮೆಟೀರಿಯಲ್ಸ್ ರಿಸರ್ಚ್ ಸೊಸೈಟಿ ಆಫ್ ಇಂಡಿಯಾದಿಂದ ವರ್ಷದ ವಿಶಿಷ್ಟ ವಸ್ತುಗಳ ವಿಜ್ಞಾನಿ ಪ್ರಶಸ್ತಿಯನ್ನು ಪಡೆದರು. ಭಾರತ ಸರ್ಕಾರವು ೨೦೦೩ ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅವರು ಸೋಲಾರ್ ಎನರ್ಜಿ ಸೊಸೈಟಿ ಆಫ್ ಇಂಡಿಯಾದಿಂದ ಫೋಟೋವೋಲ್ಟಾಯಿಕ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಕಾನ್ಫರೆನ್ಸ್ ಪ್ರಶಸ್ತಿ ಹಾಗೂ ಮೆಟೀರಿಯಲ್ಸ್ ರಿಸರ್ಚ್ ಸೊಸೈಟಿ ಆಫ್ ಇಂಡಿಯಾದ ಐಸಿಎಸ್ಸಿ-ಮೆಟೀರಿಯಲ್ಸ್ ಸೈನ್ಸ್ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಬರುವಾ ಅವರು ಕೋಲ್ಕತ್ತಾದಲ್ಲಿ ೩೦ ಮೇ ೨೦೨೧ ರಂದು ತಮ್ಮ ೮೪ ನೇ ವಯಸ್ಸಿನಲ್ಲಿ ಕೋವಿಡ್-೧೯ ನಿಂದ ನಿಧನರಾದರು. == ಉಲ್ಲೇಖಗಳು ==